ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ ಎನಿಸಿದರು.   ಇಷ್ಟೆಲ್ಲಾ ಪ್ರಯೋಜನವಿದ್ದರೂ ಭಾರತೀಯರಾದ ನಾವುಗಳೇ  ಯೋಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದ ಕಾರಣ  ಜಗತ್ತಿನ ಮುಂದೆ ಅದನ್ನು  ಸರಿಯಾಗಿ ಪ್ರಚಾರ ಮಾಡದೆ ಪ್ರಸ್ತುತ  ಪಡಿಸಲಾಗಿರಲಿಲ್ಲ.

2014ರಲ್ಲಿ  ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ  ಯೋಗದ ಮಹತ್ವವನ್ನು ಎತ್ತಿ ತೋರಿಸಿ ಅದರ ಪ್ರಯೋಜನ ಪ್ರಪಂಚದ ಎಲ್ಲರೂ ಪಡೆಯ ಬೇಕೆಂಬ ಸದುದ್ದೇಶದಿಂದ  ಜೂನ್ 21ನೇ ದಿನವನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ  ಪ್ರಸ್ತಾವನೆ ಇಟ್ಟಾಗ,  ಬೇಷರತ್ತಾಗಿ ಸುಮಾರು 140ಕ್ಕೂ ಅಧಿಕ ರಾಷ್ಟ್ರಗಳು ಅದಕ್ಕೆ ಒಪ್ಪಿದ ಪರಿಣಾಮ,   ಜೂನ್ 21 ಅಂತರಾಷ್ಟ್ರೀಯ ಯೋಗದಿನ ಎಂದು ವಿಶ್ವ ಸಂಸ್ಥೆ ಘೋಷಿಸಿತು.  ಮುಂದಿನ ದಿನಗಳಲ್ಲಿ ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳು ಯಾವುದೇ ಧರ್ಮದ ಅಡೆತಡೆಯಿಲ್ಲದೆ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ.

ಇದಕ್ಕನುಗುಣವಾಗಿ  ಕಳೆದ ಐದು ವರ್ಷಗಳಿಂದಲೂ ನಮ್ಮ ವಿದ್ಯಾರಣ್ಯಪುರದ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಅನೇಕ ಯೋಗಕೇಂದ್ರಗಳು ಮತ್ತು ಯೋಗಾಸಕ್ತರ ಸಹಕಾರದೊಂದಿಗೆ ವಿಶ್ವ ಯೋಗ ದಿನವನ್ನು ಬಹಳ ಅದ್ದೂರಿಯಿಂದ ಆಚರಿಸುತ್ತಾ ಬಂದಿದ್ದೇವೆ. ಇಂದೂ ಕೂಡ ಬೆಳ್ಳಂಬೆಳ್ಳಗಿನ ಚುಮು ಚುಮ ಚಳಿಯಲ್ಲಿ ಮೋಡ ಕವಿದ  ವಾತವರಣವನ್ನೂ ಲೆಕ್ಕಿಸದೆ ಸುಮಾರು 400-500 ಯೋಗಪಟುಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದದ್ದು ಅಭಿನಂದನೀಯ.

ಇಂದಿನ ಕಾರ್ಯಕ್ರಮ ಅಸತೋಮ ಸದ್ಗಮಯ ಶ್ಲೋಕದ ಹಿನ್ನಲೆ ಧ್ವನಿಯೊಂದಿಗೆ ಜ್ಯೋತಿ ಬೆಳಗಿ, ಭಾರತಮಾತೆಗೆ  ಒಕ್ಕೊರಲಿನ ಕಂಠದಿಂದ ಬೋಲೋ…. ಭಾರತ್ ಮಾತಾ ಕೀ… ಜೈ… ಎಂಬ ಜಯ ಘೋಷದೊಂದಿಗೆ ಆರಂಭವಾಗಿ,  ಶ್ರೀಮತಿ ಸುಧಾ ಸೋಮೇಶ್ ಮತ್ತು ಸಿಂಧು ಸೋಮೇಶ್ ಅವರ ಯೋಗ ಗೀತೆಯೊಂದಿಗೆ ಆರಂಭವಾಯಿತು.   ಇಂದಿನ ವಕ್ತಾರರಾದ            ಶ್ರೀ. ಡಾ. ಜಯಪ್ರಕಾಶ್  ಮೂಲತಃ ಪುತ್ತೂರಿನವರು. ಪಶುವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವೀಧರರು ಮತ್ತು ಪ್ರಸ್ತುತ ರಾಜ್ಯಸರ್ಕಾರ ಪಶು ಸಂಗೋಪನ ಇಲಾಖೆಯಲ್ಲಿ  ಸಹಾಯಕ ನಿರ್ದೇಶಕಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಅವರು ಭಾರತೀಯ ಯೋಗ ಮತ್ತು ಇಂದಿನ ಜನತೆಗೆ ಅದರ ಆವಶ್ಯಕತೆಯನ್ನು ಅತ್ಯಂತ ಮನೋಜ್ಞವಾಗಿ  ತಿಳಿಸಿಕೊಟ್ಟರು.  ಅಷ್ಟಾಂಗ ಯೋಗದ ನಿಯಮಗಳಾದ  ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ  ಮತ್ತು ಸಮಾಧಿಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಟ್ಟ ನಂತರ ಆರೋಗ್ಯಕರವಾಗಿರಲು ಪರಿಸರದ ಯೋಗದ ಜೊತೆಗೆ ಪರಿಸರದ ಕಾಳಜಿಯೂ ಅತ್ಯಾವಶ್ಯಕ ಎಂದು ತಿಳಿಸಿ ಸಾಧ್ಯವಾದಷ್ಟೂ ಪ್ಲಾಸ್ಟಿಕ್ ಮಕ್ತವನ್ನಾಗಿಸೋಣ ಎಂದು ತಿಳಿಸಿ say  NO to carry BAG , Carry a BAG ಎಂದು ಮನವಿ ಮಾಡಿದ್ದಲ್ಲದೆ,   ಯೋಗ ಕೇವಲ ಆರೋಗ್ಯಕ್ಕಾಗಿಯೇ ನೋಡದೆ ಅದನ್ನು ನಮ್ಮ ದೈನಂದಿನ  ಚಟುವಟಿಕೆಯ ಭಾಗವನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಜಯಪ್ರಕಾಶ್ ಜೀ ಅವರ ಭೌಧ್ದಿಕ್ ನಂತರ ಶ್ರೀಮತಿ ಆಶಾ  ನೇತೃತ್ವದಲ್ಲಿ  ಸುಮಾರು  ಅರ್ಧ ಗಂಟೆಗಳಿಗೂ ಅಧಿಕ ಸಮಯ  ವಿವಿಧ ರೀತಿಯ ನಿಂತ ಮತ್ತು ಕುಳಿತ ಆಸನಗಳ ಜೊತೆ ಸೂರ್ಯ ನಮಸ್ಕಾರ ಮಾಡಿಸಿ, ಯೋಗ ಗುರು ಪಂತಜಲಿ ಮಹರ್ಷಿಗಳನ್ನು ಸ್ಮರಿಸಿದರು.    ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯ ಅವರ ಕಂಚಿನ ಕಂಠದ ವಂದೇಮಾತರಂ ನೊಂದಿಗೆ ಮೊದಲ ಭಾಗದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ನಮ್ಮೆಲ್ಲಾ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು  ನಮ್ಮ ಮಕ್ಕಳಿಗೆ ಕಲಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.  ಅದರ ಭಾಗವಾಗಿಯೇ ನಮ್ಮ ಕಾರ್ಯಕ್ರಮದ ಎರಡನೇಯ ಭಾಗವಾಗಿ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಸುಮಾರು ಎಂಟು ಹತ್ತು ಶಾಲೆಗಳ ಸುಮಾರು 700-800ಕ್ಕೂ ಅಧಿಕ ಮಕ್ಕಳು ತಮ್ಮ ಅಧ್ಯಾಪಕರ ಜೊತೆ ಶಿಸ್ತಿನಲ್ಲಿ ಬಂದು ಇಡೀ ಕಾರ್ಯಕ್ರಮದ ಕಲರವವನ್ನು ಹೆಚ್ಚಿಸಿದವು.

ಕಾರ್ಯಕ್ರಮದ ನಿರೂಪಕರಾದ ಶ್ರೀಕಂಠ ಬಾಳಗಂಚಿಯವರು ಮಕ್ಕಳ  ಉತ್ಸಾಹ ಹೆಚ್ಚಿಸಲು ಮಕ್ಕಳಿಂದ  ಎರಡೂ ಕೈಗಳನ್ನು ಎತ್ತಿ ಹಿಡಿದು ಜೋರಾಗಿ ಬೋಲೋ…. ಭಾರತ್ ಮಾತಾ ಕೀ… ಜೈ… ಎಂಬ ಜಯ ಘೋಷವನ್ನು ಮೂರು ಬಾರಿ ಇಡೀ ವಿದ್ಯಾರಣ್ಯಪುರಕ್ಕೇ ಕೇಳುವಂತೆ ಹೇಳಿಸುವುದರೊಂದಿಗೆ ಆರಂಭವಾಯಿತು. ಮಕ್ಕಳ  ಅಮಿತೋತ್ಸಾಹವನ್ನು ಗಮನಿಸಿದ ಯೋಗ ಶಿಕ್ಷಕಿ ಆಶಾರವರೂ ಕೂಡಾ ಮಕ್ಕಳಿಗೆ  ಸ್ನಾಯು ಸಡಿಲಗೊಳಿಸುವ ವ್ಯಾಯಾಮಗಳೊಂದಿಗೆ ಆರಂಭಿಸಿ ನಿಧಾನವಾಗಿ ನಾನಾ ರೀತಿಯ  ನಿಂತ ಮತ್ತು ಕುಳಿತ ಆಸನಗಳ ಜೊತೆ ಸೂರ್ಯ ನಮಸ್ಕಾರ ಮಾಡಿದರು. ಮಕ್ಕಳ ಜೊತೆಗೆ  ಹಲವಾರು ಶಾಲಾ ಶಿಕ್ಷಕ, ಶಿಕ್ಷಕಿಯರೂ ಸಹಾ ಯೋಗಭ್ಯಾಸ ಮಾಡಿ ಕಾರ್ಯಕ್ರಮದ ಮೆರಗನ್ನು ಇನ್ನಷ್ಟೂ ಹೆಚ್ಚಿಸಿದರು. ಅದರ ಜೊತೆ ಜೊತೆಯಲ್ಲಿಯೇ ಯೋಗ ಗುರು ಪಂತಜಲಿ ಮಹರ್ಷಿಗಳನ್ಣೂ ಸ್ಮರಿಸಿದರು.   ಕಾರ್ಯಕ್ರಮಕ್ಕೆ ಪ್ರತ್ಯಕ್ಶವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲ ಮಹನೀಯರಿಗೂ ಮತ್ತು ಶಾಲಾ ಆಡಳಿತ ಮಂಡಲಿ ಮತ್ತು ಶಿಕ್ಷಕ/ಶಿಕ್ಷಕಿಯರಿಗೆ ವಂದಾನಾರ್ಪಣೆ ಅರ್ಪಿಸಿ,    ಯೋಗಾಭ್ಯಾಸದಿಂದ  ಆದ ಆಯಾಸ ಪರಿಹಾರಕ್ಕಾಗಿ ಮಕ್ಕಳಿಗೆ ಬಿಸ್ಕೆಟ್ ಕೊಡುವುದರ ಮೂಲಕ ವಿದ್ಯಾರಣ್ಯಪುರದಲ್ಲಿ   ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಎರಡನೇ ಭಾಗವನ್ನೂ ಸಹಾ  ಅತ್ಯಂತ ಯಶಸ್ವಿಯಾಗಿ  ನಡೆಸಲಾಯಿತು.

ಎರಡೂ  ಕಾರ್ಯಕ್ರಮಗಳನ್ನು ಮುಗಿಸುವ ಮೊದಲು ಎಲ್ಲರೂ ಯೋಗಾಭ್ಯಾಸವನ್ನು ಕೇವಲ  ಇದೊಂದೇ  ದಿನಕ್ಕೆ ಮೀಸಲಾಗಿಡದೆ ಯೋಗವನ್ನು ನಮ್ಮ ದೈನಂದಿನ ಅಂಗವಾಗಿ ಮಾಡಿಕೊಳ್ಳುವುದರ ಮೂಲಕ  ಪ್ರತೀ ದಿನವೂ ಅಭ್ಯಾಸ ಮಾಡುತ್ತಾ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ  ಇಟ್ಟಿಕೊಳ್ಳುವಂತೆ   ಪ್ರತಿಜ್ಞೆ ಮಾಡಿ ಕೊಳ್ಳೋಣ ಎಂದು ವಿನಂತಿ ಮಾಡಿಕೊಳ್ಳಲಾಯಿತು.

ಎಲ್ಲಾ ಸಹೃದಯರ ಸಹಕಾರದಿಂದ ಕಾರ್ಯಕ್ರಮ ಮತ್ತೊಮ್ಮೆ  ಅತ್ಯಂತ ಯಶಸ್ವಿಯಾಗಿ ನಡೆದು ಕಾರ್ಯಕ್ರಮ ಮುಗಿದ  ಒಂದು ಘಂಟೆಗೊಳಗೆ ಅಲ್ಲಿ  ಅಂತಹ ದೊಡ್ಡ ಕಾರ್ಯಕ್ರಮ ನಡೆಯಿತು ಎನ್ನುವ ಯಾವುದೇ ರೀತಿಯ ಕುರುಹು ಇಲ್ಲದಂತೆ ಸ್ಚಚ್ಚಗೊಳಿಸಿ ಸ್ವಚ್ಚ ಭಾರತವನ್ನು ಅಕ್ಷರಶಃ ಆಚರಣೆಗೆ ತಂದ  ಕಾರ್ಯಕ್ರಮದ ಆಯೋಜಕರು ಎಲ್ಲರ ಮನಸ್ಸೆಳೆದರು ಎಂದರೆ ಅತಿಶಯೋಕ್ತಿಯೇನಲ್ಲ.

ಇಂದು ವಿದ್ಯಾರಣ್ಯಪುರದ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಲಿತ ಯೋಗಾಸನಗಳನ್ನು  ವರ್ಷವಿಡೀ ಅಭ್ಯಾಸ ಮಾಡುತ್ತಾ ಮತ್ತೆ ಮುಂದಿನ ವರ್ಷ ಇದೇ ಜಾಗದಲ್ಲಿ  ಇದೇ ಸಮಯಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ.

ಏನಂತೀರೀ?

2 thoughts on “ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

Leave a comment